ಜನಪ್ರಿಯ ನಿರ್ದೇಶಕ ಎಸ್ ನಾರಾಯಣ್ ಅವರ ‘ಪಂಟ ಚಿತ್ರ ಕಡೇಯ ಘಟ್ಟ ತಲುಪಿಕೊಂಡಿದೆ. ಅನೂಪ್ ರೇವಣ್ಣ ಹಾಗೂ ರಿತೀಕ್ಷ (ಮೋನಿಕಾ) ಅಭಿನಯದ ಚಿತ್ರ ಮಾತುಗಳ ಭಾಗ ಹಾಗೂ ಕೆಲವು ಹಾಡುಗಳನ್ನು ಚಿತ್ರೀಕರಣ ಮಾಡಿಕೊಂಡು ಇದೀಗ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದೆ.
ಈ ಚಿತ್ರದ ನಿರ್ಮಾಪಕರು ಸುಬ್ರಮಣ್ಯಂ. ವಿಶ್ವ, ಆರ್ಸಿನ್, ಇಂದ್ರ ಕುಮಾರ್, ಕುಸ್ತಿ ರಮೇಶ್, ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಮೊದಲಾದವರು ತಾರಾಗಣದಲ್ಲಿ ಇದ್ದಾರೆ.
‘ಪಂಟ ಚಿತ್ರಕ್ಕೆ ಎಸ್ ನಾರಾಯಣ್ ಅವರ ಮೊದಲ ಪುತ್ರ ಪಂಕಜ್ ನಿರ್ದೇಶನದಲ್ಲಿ ಸಹಾಯಕರಾದರೆ, ದ್ವಿತೀಯ ಪುತ್ರ ಪವನ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಅನುಭವ ಪಡೆಯುತ್ತಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಈ ಚಿತ್ರದ ಕಥೆ ಹಾಗೂ ಚಿತ್ರಕಥೆ ವಿಭಿನ್ನ ಎಂದು ಹೇಳುತ್ತಾರೆ ಎಸ್ ನಾರಾಯಣ್. ಬೆಂಗಳೂರಿನ ಸುತ್ತ ಮುತ್ತಲೇ ಚಿತ್ರೀಕರಣ ನಡೆದಿರೋ ‘ಪಂಟ ಚಿತ್ರಕ್ಕೆ ಮ್ಯಾಥ್ಯೂ ರಾಜನ್ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಎಸ್ ನಾರಾಯಣ್ ಅವರದೇ ಸಂಗೀತ ಹಾಗೂ ಸಾಹಿತ್ಯ ಇರುವ ಈ ಚಿತ್ರಕ್ಕೆ ಹರೀಶ್ ಸಂಕಲನ, ಹರ್ಷ ನೃತ್ಯ ಸಂಯೋಜನೆ, ಡಾ ರವಿ ವರ್ಮ ಸಾಹಸ ಇದೆ.